Tuesday 9 December 2014

ವಿಜ್ಞಾಪನೆ


ಆಹಾ...   ರಾಮನ ಮಕ್ಕಳ ಬಗೆಗಿನ ಚರ್ಚೆ... ಅದೂ ನನ್ನ  ದೇಶದ ಅಣ್ಣ ತಮ್ಮಂದಿರು ಹೊಟ್ಟೆಗೆ ಕಷ್ಟ ಪಡುತ್ತಿರುವ ಸಂದರ್ಭದಲ್ಲಿ... ಇದೆಂತ ವಿಪರ್ಯಾಸ ಅಲ್ಲವೇ !!! . ನಮ್ಮ ದೇಶದ ಪ್ರಮುಖ ಚರ್ಚಾ ಪ್ರಸಂಗಗಳು, ಭಗವದ್ಗೀತೆ ನಮ್ಮ ರಾಷ್ಟ್ರೀಯ ಪುಸ್ತಕವಾಗಬೇಕೆ ??  ರಾಮನ ಮಂದಿರ  ಕಟ್ಟುವುದು ಎಂದು ?? ರಾಮನ ಮಕ್ಕಳು ಯಾರು ?? ಕುರಾನ್ ಬಟ್ಟೆಯ ಬಗ್ಗೆ ಹೇಳುವುದೇನು ?? ಈಸಾಯಿಗಳ ಮತಾಂತರದ ಬಗ್ಗೆ !!! ... ಏಕೆ ಹೀಗೆ ??? ನಮ್ಮ ದೇಶದ ಜ್ವಲಂತ ಸಮಸ್ಯೆಗಳು ಇವೇಯೇನು ? ಇಲ್ಲವಲ್ಲಾ... ಬಾಯಿಗೆ ಬಂದಂತೆ ಹರಟುವ ನಮ್ಮ ನಾಯಕರಿಗೇಕೆ ಇದು ಅರ್ಥವಾಗುವುದಿಲ್ಲ ... 'ಬಡತನ ಮಾನಸಿಕ ಸ್ಥಿತಿ'  ಎನ್ನುವವನೊಬ್ಬ... 'ಅತ್ಯಾಚಾರದಂತಹ ಸಣ್ಣ ಪ್ರಕರಣ ಹೆಚ್ಚು publicity ಪಡೆದಿದ್ದರಿಂದ ನಮ್ಮ ಪ್ರವಾಸೋದ್ಯಮದ ಆದಾಯ ಕಡಿಮೆ ಆಯಿತು' ಎನ್ನುವವನು ಇನ್ನೊಬ್ಬ.. ಜನರ ಜೀವ ಮತ್ತು ಜೀವನ ಅಷ್ಟೊಂದು ಹಗುರವೇ ನಿಮಗೆ... ಚಳಿಗಾಲದ ಅಧಿವೇಶನ ನಡೆಯುತ್ತಿದೆ, ಅದರ ಪ್ರಮುಖ ಚರ್ಚಾ ವಿಚಾರ ನೋಡಿ ಅತ್ಯಂತ ದುಃಖ ಆಯಿತು... ಸಚಿವೆಯ ಹೇಳಿಕೆಯ ಬಗ್ಗೆ!!! ಅದಕ್ಕೆ ಪ್ರತಿಯುತ್ತರ ಕೊಡುವ ನಮ್ಮ ಪ್ರಧಾನ ಮಂತ್ರಿಯವರು 'ಆಕೆ ಹಳ್ಳಿಯ ಹಿನ್ನೆಲೆಯವರು .. ಕ್ಷಮೆ ಕೇಳಿದ್ದಾರೆ .. ಬಿಟ್ಟುಬಿಡಿ ' ಎನ್ನುತ್ತಾರೆ .. ಹಾಗೆಂದರೆ, ಹಳ್ಳಿಯ ಹಿನ್ನೆಲೆಯವರು ಅಸಂಬದ್ಧವಾಗಿ, ಅನಾಗರೀಕ ಹೇಳಿಕೆ ಕೊಡುತ್ತಾರೆಂದೇ??? ನಮ್ಮ ಸಂಸ್ಕೃತಿಯ ಮೂಲ ಸೆಲೆ ಇರುವುದೇ ಹಳ್ಳಿಗಳಲ್ಲಿ ಮಾನ್ಯ ಪ್ರಧಾನಿಗಳೇ ... ದಯವಿಟ್ಟು ಅರ್ಥ ಮಾಡಿಕೊಳ್ಳಿ .

ಅಭಿವೃದ್ದಿಯ ಮಂತ್ರ ಜಪಿಸುವ ನಮ್ಮ ಸರ್ಕಾರ, ಫಿಜಿ ದ್ವೀಪ ಸೇರಿದಂತೆ ಹಲವಾರು ರಾಷ್ಟ್ರಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಇತ್ತೀಚಿಗಿನ ಸುದ್ಧಿ.. ಒಳ್ಳೆಯ ವಿಚಾರ .. ಸ್ವಾಗತಾರ್ಹ ಕೂಡ. ಆದರೆ, ನಮ್ಮ ದೇಶದ ಜನರ ಉದ್ಯಮದ ಬಗ್ಗೆ ಕೂಡ ಯೋಚಿಸಿ ಸ್ವಾಮಿ... ಎಲ್ಲಾ multinational ಕಂಪನಿಗಳಿಗೆ ಸ್ಥಾಪನೆ ಮಾಡಲು  ಎಲ್ಲಿಂದ ಸ್ಥಳ  ತರುತ್ತೀರಿ ... ಮತ್ತೆ ರೈತನ ಭೂಮಿಗೇ ಬರುವುದು ಕುತ್ತು. ಅನ್ನ ಬೆಳೆಯುವ ಭೂಮಿಯಲ್ಲಿ semiconductor chip ಗಳನ್ನು ತಯಾರಿಸುವ ಕಂಪನಿಗಳು, software ಕಂಪನಿಗಳು ತಲೆಯೆತ್ತುತ್ತವೆ. ಕೃಷಿಯೂ ಒಂದು ಉದ್ಯಮ ಎಂದು ಏಕೆ ನಿಮಗೆ ತಿಳಿಯುತ್ತಿಲ್ಲ?? ಅದಕ್ಕೂ ಕೊಂಚ ಗಮನ ಕೊಡಿ. ನಮ್ಮ ನಿಮ್ಮೆಲ್ಲರಿಗೂ ತಿನ್ನಲು ಕೂಳು ಕೊಡುತ್ತಿರುವ ಉದ್ಯಮ ಅದು. ವೈಜ್ಞಾನಿಕವಾಗಿ, ಆರ್ಥಿಕವಾಗಿ  ಕೃಷಿಯನ್ನು ಬಲಪಡಿಸಿ. ಉಳುವ ಭೂಮಿ ಕಂಪನಿಯವರಿಗೆ ಕೊಟ್ಟು ರೈತನ ತಿನ್ನುವ ಕೈ ಕತ್ತಿರಸಬೇಡಿ. ಅಭಿವೃದ್ದಿ ಎನ್ನುವುದು ಸಮಾಜದ ಒಂದು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿ ಸಾಧಿಸಲು ಸಾಧ್ಯವೇ ಇಲ್ಲ.

ಧರ್ಮ ಆಡಳಿತಕ್ಕೆ ಪೂರಕ ಆಗಿರಬೇಕು ಹೊರತು ಧರ್ಮವೇ  ದೇಶವನ್ನು ಆಳಬಾರದು. ಆಳಿದರ ಪರಿಣಾಮ ಈಗಾಗಲೇ ಆಫ್ಘಾನಿಸ್ಥಾನ ಮತ್ತಿತರ ದೇಶಗಳ ಪರಿಸ್ಥಿತಿಗಳಲ್ಲಿ ವಿದಿತವಾಗಿದೆ. ಧರ್ಮ ಮತ್ತು ಜಾತಿಯ ಹೆಸರಿನ ರಾಜಕಾರಣ ನಿಲ್ಲಿಸಿದಂದೇ ಭಾರತದ ಸಂಪೂರ್ಣ ಅಭಿವೃದ್ಧಿ ಸಾಧ್ಯ. ಭಗವದ್ಗೀತೆಯ ಉತ್ಕೃಷ್ಟತೆ ಮತ್ತು ಅದಕ್ಕೆ ನಾವು ಕೊಟ್ಟಿರುವ ಗೌರವ ಅದನ್ನು ರಾಷ್ಟ್ರೀಯ ಗ್ರಂಥವಾಗಿಸುವದರಿಂದ ಹೆಚ್ಚುವುದಿಲ್ಲ, ಹಾಗೆಯೇ ಮಾಡದಿದ್ದರೆ ಕಡಿಮೆಯೂ ಆಗಲಾರದು. ಆದರೆ, ನಮ್ಮ ದೇಶದ ಸರ್ವರನ್ನು ಒಟ್ಟುಗೂಡಿಸುವ ಗ್ರಂಥ ನಮ್ಮ ಸಂವಿಧಾನ. ಅದಲ್ಲವೇ ನಮ್ಮ ರಾಷ್ಟ್ರ ಗ್ರಂಥ. ಇನ್ನೇಕೆ ಈ ಭಗವದ್ಗೀತೆ, ಕುರಾನ್, ಬೈಬಲ್ ಗಳ ಬಗೆಗಿನ ಚರ್ಚೆ.

ನನ್ನ ನಲ್ಮೆಯ ದೇಶದ ನಾಯಕರೆ, ಒಮ್ಮೆ ನಿಮ್ಮ ಅಂತರಾತ್ಮದ ಬಳಿ ನಿಂತು ಪ್ರಶ್ನೆ ಕೇಳಿಕೊಳ್ಳಿ.. ನಾ ಮಾಡಿದ್ದು ಸರಿಯೇ ಎಂದು... ನೀವು ೧೨೫ ಕೋಟಿ ಭಾರತೀಯರ ಪ್ರತಿನಿಧಿಗಳು. ಅವರ ಜೀವ, ಜೀವನ ನಿಮ್ಮ ಮೇಲೆ ನಿಂತಿದೆ. ಉದಾಸೀನ ಬೇಡ, ಮಾತ್ಸರ್ಯ ಬೇಡ, ನೀವು ತಿನ್ನುವ ಭ್ರಷ್ಟಾಚಾರದ ಹಣ ಯಾರೋ ತಂದೆಯ ಆರೋಗ್ಯ ತಪಾಸಣೆಯ ಖರ್ಚಿಗೆಂದು ಹಾತೊರೆಯುತ್ತಿರುವ ಮಗನದ್ದಾಗಿರಬಹುದು, ಮಗಳ ಮದುವೆ ಮಾಡಲು ಕಾಯುತ್ತಿರುವ ತಂದೆಯದ್ದಾಗಿರಬಹುದು... ಒಮ್ಮೆ ಯೋಚಿಸಿ .. ಅಂದ ಹಾಗೆ ಪುಟ್ಟಪ್ಪನವರ ಕವನ ನೆನಪಿಗೆ ಬಂತು,

" ಮುಚ್ಚು ಮರೆಯಿಲ್ಲದೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ
ಓ ಗುರುವೇ ಅಂತರಾತ್ಮ ... "  

ಭವ್ಯ ಭಾರತದ ಕನಸು ಕಟ್ಟಿರುವ ಕಂಗಳಲಿ, ಭಾರತದ ಭವಿಷ್ಯಕ್ಕೆ ಅಶ್ರು ತರ್ಪಣ ಕೊಡಿಸಬೇಡಿ.. 

No comments:

Post a Comment